KN/Prabhupada 0030 - ಕೃಷ್ಣನು ಕೇವಲ ಆನಂದಿಸುತ್ತಿದ್ದಾನೆ



Sri Isopanisad, Mantra 2-4 -- Los Angeles, May 6, 1970

"ದೇವೋತ್ತಮ ಪರಮ ಪುರುಷನು ತನ್ನ ಧಾಮದಲ್ಲಿ ಸ್ಥಿರವಾಗಿದ್ದರೂ, ಮನಸ್ಸಿಗಿಂತಲೂ ವೇಗವಾಗಿ ಚಲಿಸಬಲ್ಲ ಹಾಗು ಎಲ್ಲರನ್ನೂ ಹಿಂದಿಕ್ಕಬಲ್ಲ. ಶಕ್ತಿವಂತ ದೇವತೆಗಳೂ ಆತನನ್ನು ತಲುಪಲಾರರು. ಒಂದೇ ಸ್ಥಳದಲ್ಲಿ ಇದ್ದರೂ, ಆತನಿಗೆ ಗಾಳಿ ಮತ್ತು ಮಳೆಯನ್ನು ನೀಡುವವರ ಮೇಲೆ ನಿಯಂತ್ರಣವಿದೆ. ಅವನು ಶ್ರೇಷ್ಠತೆಯಲ್ಲಿ ಎಲ್ಲರನ್ನೂ ಮೀರಿಸುತ್ತಾನೆ. ಇದನ್ನು ಬ್ರಹ್ಮ ಸಂಹಿತೆಯು ದೃಢೀಕರಿಸುತ್ತದೆ - ಗೋಲೋಕ ಏವ ನಿವಸತಿ ಅಖಿಲಾತ್ಮ ಭೂತಃ (ಬ್ರ. ಸಂ. 5.37) ಕೃಷ್ಣನು ಗೋಲೋಕ ವೃಂದಾವನದಲ್ಲಿ ಇದ್ದರೂ, ಆತನು ಏನನ್ನೂ ಮಾಡಬೇಕಾಗಿಲ್ಲ. ಅವನು ತನ್ನ ಭಕ್ತರ ಜೊತೆಗೆ ಆನಂದಿಸುತ್ತಿದ್ದಾನೆ, ಗೋಪಿಯರು ಮತ್ತು ಗೋಪಾಲಕರು, ಅವನ ತಾಯಿ, ಅವನ ತಂದೆ. ಸಂಪೂರ್ಣವಾಗಿ ಸ್ವತಂತ್ರ, ಮತ್ತು ಅವನ ಭಕ್ತರು ಇನ್ನೂ ಹೆಚ್ಚು ಸ್ವತಂತ್ರರು. ಏಕೆಂದರೆ, ತನ್ನ ಭಕ್ತರು ಅಪಾಯದಲ್ಲಿದ್ದಾಗ ಅವರನ್ನು ರಕ್ಷಿಸುವ ಬಗ್ಗೆ ಕೃಷ್ಣನಿಗೆ ಆತಂಕವಿರುತ್ತದೆ, ಆದರೆ ಭಕ್ತರಿಗೆ ಯಾವ ಆತಂಕವು ಇಲ್ಲ. "ಓ, ಕೃಷ್ಣನು ಇದ್ದಾನೆ". ನೋಡಿ. (ಮೆಲುನಗು) ಭಕ್ತರಿಗೆ ಯಾವ ಆತಂಕವೂ ಇಲ್ಲ. ಕೃಷ್ಣ ಪುಸ್ತಕದಲ್ಲಿ ನೀವು ಓದಬಹುದು. ಎಷ್ಟೊಂದು ಅಪಾಯಗಳು. ಹುಡುಗರು, ಕೃಷ್ಣನೊಂದಿಗೆ, ಪ್ರತಿ ದಿನವೂ, ತಮ್ಮ ಕರುಗಳು ಮತ್ತು ಹಸುಗಳನ್ನು ಮೇಯಿಸಲು ಹೋಗುತ್ತಿದ್ದರು ಮತ್ತು ಯಮುನಾ ನದಿ ದಡದ ಕಾಡಿನಲ್ಲಿ ಆಡುತ್ತಾರೆ, ಮತ್ತು ಕಂಸನು ಅವರನ್ನು ನಾಶಪಡಿಸಲು ಕೆಲವು ರಾಕ್ಷಸರನ್ನು ಕಳುಹಿಸುತ್ತಾನೆ. ಇದನ್ನು ನೀವು ಚಿತ್ರಗಳಲ್ಲಿಯೂ ನೋಡಬಹುದು. ಅದರೂ ಅವರು ಸಂತೋಷವಾಗಿರುತ್ತಾರೆ, ಏಕೆಂದರೆ ಅವರಿಗೆ ವಿಶ್ವಾಸವಿದೆ. ಅದೇ ಆಧ್ಯಾತ್ಮಿಕ ಬದುಕು. ಅವಶ್ಯ ರಕ್ಷಿಬೆ ಕೃಷ್ಣ ವಿಶ್ವಾಸ ಪಾಲನ. ಈ ದೃಢವಾದ ನಂಬಿಕೆ, "ಯಾವುದೇ ಅಪಾಯಕರ ಪರಿಸ್ಥಿತಿಯಲ್ಲೂ ಕೃಷ್ಣನು ನನ್ನನ್ನು ರಕ್ಷಿಸುತ್ತಾನೆ," ಇದೇ ಶರಣಾಗತಿ.

ಶರಣಾಗತಿಯಲ್ಲಿ ಆರು ಹಂತಗಳಿವೆ. ಮೊದಲನೆಯದಾಗಿ ನಾವು ಭಕ್ತಿ ಸೇವೆಗೆ ಅನುಕೂಲಕರವಾದದ್ದನ್ನು ಸ್ವೀಕರಿಸಬೇಕು; ಭಕ್ತಿ ಸೇವೆಗೆ ಪ್ರತಿಕೂಲವಾದ ಯಾವುದನ್ನಾದರೂ ನಾವು ತಿರಸ್ಕರಿಸಬೇಕು. ಮತ್ತು ಭಗವಂತನ ಭಕ್ತರ ಜೊತೆಗೆ ತನ್ನನ್ನು ಪರಿಚಯಿಸಿಕೊಳ್ಳುವುದು. ಕೃಷ್ಣನು ಅನೇಕ ಭಕ್ತರನ್ನು ಹೊಂದಿದ್ದಾನೆ. ಅವರ ಜೊತೆ... ಕೃತಕವಾಗಿ ಅಲ್ಲ. ನೀವು ಭಕ್ತಿಯಲ್ಲಿ ಮುಂದುವರಿದಾಗ ಕೃಷ್ಣನ ಜೊತೆಗಿನ ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳುತ್ತೀರ. ನಂತರ ನೀವು ಭಕ್ತರ ಸಂಘವನ್ನು ಹೊಂದಿದಾಗ, "ಕೃಷ್ಣನು ನನಗೆ ರಕ್ಷಣೆಯನ್ನು ನೀಡುತ್ತಾನೆ" ಎಂಬ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತೀರ. ಯಥಾರ್ಥಕ್ಕೆ, ಅವನು ಎಲ್ಲರಿಗೂ ರಕ್ಷಣೆಯನ್ನು ನೀಡುತ್ತಿದ್ದಾನೆ. ಅದು ಸತ್ಯ. ಆದರೆ ಮಾಯೆಯ ಪ್ರಭಾವದಿಂದಾಗಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತಿದ್ದೇವೆ, ಆಹಾರವನ್ನು ನಾವೇ ತಯಾರಿಸುತ್ತಿದ್ದೇವೆ, ಎಂದು ತಿಳಿಯುತ್ತೇವೆ. ಆದರೆ ಅದು ಸತ್ಯವಲ್ಲ.