KN/Prabhupada 0074 - ನೀವು ಪ್ರಾಣಿಗಳನ್ನು ಏಕೆ ತಿನ್ನಬೇಕು



Lecture on BG 4.21 -- Bombay, April 10, 1974

ಭಗವದ್ಗೀತೆಯಲ್ಲಿ ಎಲ್ಲಾ ವಿವರಿಸಲಾಗಿದೆ. ಭಗವದ್ಗೀತೆಯು, “ನೀನು ಗಾಳಿ ಸೇವಿಸಿ ಬದುಕು”, ಎಂದು ಹೇಳುವುದಿಲ್ಲ. ಇಲ್ಲ. ಭಗವದ್ಗೀತೆಯು ಹೇಳುತ್ತದೆ, ಅನ್ನಾದ್ ಭವಂತಿ ಭೂತಾನಿ (ಭ.ಗೀ 3.14). ಅನ್ನ. ಅನ್ನ ಅಂದರೆ ಆಹಾರ ಧಾನ್ಯಗಳು. ಆಹಾರ ಧಾನ್ಯಗಳ ಅಗತ್ಯವಿದೆ. ಅನ್ನಾದ್ ಭವಂತಿ ಭೂತಾನಿ. ಭಗವದ್ಗೀತೆಯು ಎಂದಿಗೂ “ನಿನಗೆ ತಿನ್ನುವ ಅಗತ್ಯವಿಲ್ಲ. ನೀನು ಗಾಳಿ ಸೇವಿಸಿ ಯೋಗ ಮಾಡು”, ಎಂದು ಹೇಳುವುದಿಲ್ಲ. ಇಲ್ಲ. ಆದರೆ ನಾವು ಅಧಿಕ ಅಥವ ಕಡಿಮೆ ತಿನ್ನಬಾರದು. ಅದನ್ನು ಮುಖ್ಯವಾಗಿ ಹೇಳಲಾಗಿದೆ. ಯುಕ್ತಾಹಾರ ವಿಹಾರಸ್ಯ. ಹೆಚ್ಚೂ ತಿನ್ನಬಾರದು ಕಡಿಮೆಯೂ ತಿನ್ನಬಾರದು. ಮತ್ತು ನಿರಾಶೀಹ. ನಿರಾಶೀಹ ಎಂದರೆ ಅತಿವರ್ತನೆಯಿಂದ ಕಾಮರಹಿತನಾಗಿರುವುದು. ಈಗ ನಾವು ಇಂದ್ರೀಯ ತೃಪ್ತಿಯನ್ನೆ ಹೆಚ್ಚು ಬಯಸುತ್ತಿದ್ದೇವೆ. ಅದು ಬೇಕಿಲ್ಲ. ನಿಮಗೆ ಜೀವನದ ಪರಿಪೂರ್ಣತೆ ಬೇಕೆಂದರೆ… ಇದನ್ನು ತಪಸ್ಸು ಎನ್ನುತ್ತಾರೆ.

ಬಯಕೆಗಳು ಇರುತ್ತವೆ, ಆದರೆ ಅನಾವಶ್ಯಕವಾಗಿ ಬಯಸಬಾರದು. ಪ್ರತಿಯೊಬ್ಬರಿಗು ತಿನ್ನುವ ಅಧಿಕಾರವಿದೆ, ಪ್ರಾಣಿಗಳಿಗೂ ಕೂಡ. ಪ್ರತಿಯೊಬ್ಬರಿಗು ಅಧಿಕಾರವಿದೆ. ಆದರೆ ನಾವು ಹೆಚ್ಚು ಭೋಗಿಸಬೇಕೆಂಬ ಆಸೆಯಿಂದ ಪ್ರಾಣಿಗಳು ತಕ್ಕರೀತಿಯಲ್ಲಿ ಬದುಕಲು ಅವಕಾಶ ಮಾಡಿಕೊಡುವುದಿಲ್ಲ, ಬದಲಿಗೆ, ಪ್ರಾಣಿಗಳನ್ನು ಭಕ್ಷಿಸುತ್ತೇವೆ. ಅದರ ಅಗತ್ಯವಿಲ್ಲ. ಇದನ್ನು ನಿರಾಶೀಹ ಎನ್ನುತ್ತೇವೆ. ಪ್ರಾಣಿಗಳನ್ನು ಏಕೆ ತಿನ್ನಬೇಕು? ಅದು ಅನಾಗರಿಕ ಬದುಕು. ಆಹಾರ ಲಭ್ಯವಿಲ್ಲ ಎಂದಾಗ, ಆದಿವಾಸಿಗಳಾದರೆ, ಆಗ ಪ್ರಾಣಿಗಳನ್ನು ತಿನ್ನಬಹುದು, ಏಕೆಂದರೆ ಅವರಿಗೆ ಆಹಾರವನ್ನು ಹೇಗೆ ಬೆಳೆಸುವುದೆಂದು ತಿಳಿಯದು. ಆದರೆ ಮಾನವ ಸಮಾಜ ಸುಸಂಸ್ಕೃತವಾದಾಗ, ಅವನು ಒಳ್ಳೆ ಆಹಾರ ಧಾನ್ಯಗಳನ್ನು ಬೆಳಸಬಹುದು, ಹಸುಗಳನ್ನು ತಿನ್ನುವುದನ್ನು ಬಿಟ್ಟು ಅವುಗಳನ್ನು ಪೋಷಿಸಬಹುದು. ಅವನು ಹಾಲು ಪಡೆಯಬಹುದು, ಸಾಕಷ್ಟು ಹಾಲು. ನಾವು ಹಾಲು ಮತ್ತು ಧಾನ್ಯಗಳಿಂದ ಹಲವಾರು ಉಣಿಸುಗಳನ್ನು ತಯಾರಿಸಬಹುದು. ಆದ್ದರಿಂದ ಅನಾಗತ್ಯವಾಗಿ ಭೋಗಿಸಬೇಕೆಂದು ಬಯಸಬಾರದು.

“ಕುರ್ವನ್ ನಾಪ್ನೋತಿ ಕಿಲ್ಬಿಷಮ್” (ಭ.ಗೀ 4.21), ಎಂದು ಇಲ್ಲಿ ಹೇಳಲಾಗಿದೆ. ಕಿಲ್ಬಿಷಮ್ ಅಂದರೆ ಪಾಪದ ಬದುಕಿನ ಫಲಾಪೇಕ್ಷೆಯ ಕರ್ಮ ಎಂದರ್ಥ. ಕಿಲ್ಬಿಷಮ್. ನಮ್ಮ ಅಗತ್ಯಕ್ಕಿಂತ ಅಧಿಕವಾಗಿ ಬಯಸದಿದ್ದರೆ, ಆಗ ನಾವು ದೋಷಾರೋಪಣೆಯಲ್ಲಿ ಸಿಕ್ಕಿ ಕೊಳ್ಳುವುದಿಲ್ಲ, ಕೆಲಸಗಳಲ್ಲಿ ತೊಡಗಿದ್ದರೂ ಕೂಡ ಪಾಪಕರ್ಮಗಳಲ್ಲಿ ತೊಡಗುವುದಿಲ್ಲ, ಕುರ್ವನ್ ಅಪಿ. ನೀನು ಕೆಲಸಮಾಡುತ್ತಿರುವಾಗ, ತಿಳಿದೋ ತಿಳಿಯದೆಯೋ, ಅಪವಿತ್ರವಾದ, ಪಾಪಪೂರಿತವೂ ಆಗಿರಬಹುದಾದ, ಕೆಲಸವನ್ನು ಮಾಡಬಹುದು, ಆದರೆ ಧಾರ್ಮಿಕವಾಗಿ ಬದುಕಬೇಕೆಂದು ಬಯಸಿದರೆ ಸಾಕು, ಆಗ ಕುರ್ವನ್ ನಾಪ್ನೋತಿ ಕಿಲ್ಬಿಷಮ್. ನಮ್ಮ ಜೀವನ ಪಾಪದ ಪ್ರತಿಕ್ರಿಯೆ ಇಲ್ಲದೆ ಇರಬೇಕು. ಇಲ್ಲವಾದರೆ ನಾವು ಯಾತನೆಗೆ ಒಳಗಾಗಬೇಕಾಗುತ್ತದೆ. ಎಷ್ಟೋ ಹೇಯವಾದ ಜೀವಿಗಳನ್ನು ನೋಡುತ್ತಿದ್ದರೂ ಕೂಡ ಅವರು ನಂಬುವುದಿಲ್ಲ. ಎಲ್ಲಿಂದ ಈ 84,00,000 ಜೀವರಾಶಿಗಳು ಬರುತ್ತಿವೆ? ಬಹಳಷ್ಟು ಜೀವರಾಶಿಗಳು ಅತಿ ಹೇಯವಾದ ಪರಿಸ್ಥಿತಿಗಳಲ್ಲಿ ಬದುಕುತ್ತಿವೆ. ಸಹಜವಾಗಿ, ಆ ಜೀವಿಗೆ ಇದರ ಅರಿವಿಲ್ಲ, ಆದರೆ ನಾವು ಮನುಷ್ಯರು, ಏಕೆ ಈ ಹೇಯವಾದ ಬದುಕು ಎಂದು ನಮಗೆ ತಿಳಿದಿರಬೇಕು. ಇದು ಮಾಯೆಯ ಭ್ರಮೆ.

ಒಬ್ಬನು, ಹೇಗೆಂದರೆ… ಹಂದಿ ಬಹಳ ಹೊಲಸು ಪ್ರದೇಶಗಳಲ್ಲಿ ಬದುಕುತ್ತದೆ, ಹೇಸಿಗೆಯನ್ನು ತಿನ್ನುತ್ತಿದರೂ ಅದು ಬಹಳ ಖುಷಿಯಾಗಿದೆ, ಆದ್ದರಿಂದ ದಪ್ಪವಾಗುತ್ತಿದೆ. ಒಬ್ಬನಿಗೆ ಖುಷಿಯಾದರೆ, “ನಾನು ಬಹಳ ಸಂತೋಷವಾಗಿದ್ದೇನೆ”, ಎಂದು ಅವನು ದಪ್ಪವಾಗುತ್ತಾನೆ. ನೀವು ದಪ್ಪಗಿರುವ ಹಂದಿಗಳನ್ನು ನೋಡುವಿರಿ. ಅವು ಏನನ್ನು ತಿನ್ನುತ್ತವೇ? ಹೇಸಿಗೆಯನ್ನು ತಿಂದು ಹೊಲಸು ಜಾಗದಲ್ಲಿ ಬದುಕುತ್ತವೆ. ಆದರೆ “ನಾವು ಬಹಳ ಸಂತೋಷವಾಗಿದ್ದೇವೆ”, ಎಂದು ತಿಳಿದುಕೊಂಡಿವೆ. ಇದೇ ಮಾಯೆಯ ಭ್ರಮೆ. ಯಾರು ಹೇಯವಾದ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾನೋ, ಮಾಯಾ, ಭ್ರಮೆಯಿಂದ, ಅವನು ನಾನು ಚೆನ್ನಾಗಿದ್ದೇನೆ, ಪರಿಪೂರ್ಣವಾದ ಜೀವನವನ್ನು ಬಾಳುತ್ತಿದ್ದೇನೆ ಅಂದುಕೊಂಡಿದ್ದಾನೆ. ಆದರೆ ಉನ್ನತ ಮಟ್ಟದಲ್ಲಿರುವ ಒಬ್ಬನು ಅವನು ಬಹಳ ಹೇಯವಾದ ಪರಿಸ್ಥಿಯಲ್ಲಿದ್ದಾನೆ ಎಂದು ಅರಿತುಕೊಳ್ಳುತ್ತಾನೆ.

ಭ್ರಮೆ ಇದೆ, ಆದರೆ ಜ್ಞಾನದಿಂದ, ಸತ್ಸಂಗದಿಂದ, ಶಾಸ್ತ್ರದಿಂದ, ಗುರುವಿನಿಂದ, ಸಂತರಿಂದ ಬೋಧನೆ ಪಡೆದು ಜೀವನದ ಮೌಲ್ಯವೇನೆಂದು ತಿಳಿದು ಅದಕ್ಕೆ ತಕ್ಕ ಹಾಗೆ ಬಾಳಬೇಕು. ಕೃಷ್ಣನು ಬೋಧಿಸಿದ ಹಾಗೆ, ನಿರಾಶೀಹ, ಅನಾವಶ್ಯಕವಾಗಿ ಜೀವನದ ಅಗತ್ಯಗಳಿಗಿಂತ ಹೆಚ್ಚು ಬಯಸಬಾರದು. ಅದೇ ನಿರಾಶೀಹ. ನಿರಾಶೀಹ. ಅದಕ್ಕೆ ಇನ್ನೊಂದು ಅರ್ಥವೆಂದರೆ ಭೌತಿಕ ಭೋಗಗಳನ್ನು ಹೆಚ್ಚು ಬಯಸದೆಯಿರುವುದು. ಅದು ಯಾವಾಗ ಸಾಧ್ಯವೆಂದರೆ ಅವನು ಪೂರ್ಣ ಜ್ಞಾನದಲ್ಲಿದಾಗ - “ನಾನು ಈ ದೇಹವಲ್ಲ, ನಾನು ಆತ್ಮ. ನನಗೆ ಅಗತ್ಯವೇನೆಂದರೆ ಆಧ್ಯಾತ್ಮಿಕ ಜ್ಞಾನದಲ್ಲಿ ಹೇಗೆ ಮುಂದುವರಿಯ ಬಹುದು ಎಂಬುದು”. ಆಗ ಅವನು ನಿರಾಶೀಹ ಆಗುತ್ತಾನೆ. ಇದುವೇ ತಪಸ್ಸು, ವ್ರತಗಳಿಗೆ ಬೇಕಾಗಿರುವಿದು.

ಜನರು ಮರೆತು ಹೋಗಿದ್ದಾರೆ. ತಪಸ್ಸು ಅಂದರೆ ಏನೆಂದು ಅವರಿಗೆ ಗೊತ್ತಿಲ್ಲ. ಆದರೆ ಮಾನವ ಜೀವನವಿರುವುದೇ ಆ ಉದ್ದೇಶಕೋಸ್ಕರ. ತಪೋ ದಿವ್ಯಮ್ ಪುತ್ರಕಾ ಯೇನ ಶುದ್ಯೇತ್ ಸತ್ವಮ್ ಯೇನ ಬ್ರಹ್ಮ-ಸೌಖ್ಯಮ್ ಅನಂತಮ್ (ಶ್ರೀ.ಭಾ 5.5.1). ಇವು ಶಾಸ್ತ್ರದ ಭೋದನೆ. ಮಾನವ ಜೀವನವಿರುವುದೇ ತಪಸ್ಸಿಗಾಗಿ. ಹಾಗು ತಪಸ್ಯ…

ಆದ್ದರಿಂದಲೇ ವೈದಿಕ ಜೀವನದಲ್ಲಿ, ಬದುಕಿನ ಆರಂಭ ತಪಸ್ಸಿನಿಂದ, ಬ್ರಹ್ಮಚಾರಿ. ಒಬ್ಬ ವಿದ್ಯಾರ್ಥಿಯನ್ನು ಬ್ರಹ್ಮಚರ್ಯ ಆಚರಿಸಲು ಗುರುಕುಲಕ್ಕೆ ಕಳುಹಿಸುತ್ತಿದ್ದರು. ಇದು ತಪಸ್ಯ, ಆರಾಮದಾಯಕ ಜೀವನವಲ್ಲ. ನೆಲದ ಮೇಲೆ ಮಲಗುತ್ತ, ಗುರುವಿಗೋಸ್ಕರ ಮನೆ ಮನೆಗೂ ಹೋಗಿ ಭಿಕ್ಷೆಬೇಡುವುದು. ಆದರೆ ಅವರು ಸುಸ್ತಾಗುತ್ತಿರಲಿಲ್ಲ. ಏಕೆಂದರೆ ಅವರು ಮಕ್ಕಳು, ಅವರಿಗೆ ಈ ತಪಸ್ಸುಗಳಲ್ಲಿ ತರಬೇತಿ ನೀಡಿದರೆ, ಅವರು ಆಚರಿಸುತ್ತಾರೆ. ಅವರು ಎಲ್ಲಾ ಹೆಂಗಸರನ್ನು , ಅಮ್ಮ ಎಂದು ಕರೆಯುತ್ತಾರೆ. “ಅಮ್ಮ, ಭೀಕ್ಷೆ ನೀಡಿ”. ಹಾಗು ಅವರು ಗುರುಕುಲಕ್ಕೆ ಹಿಂತಿರುಗುತ್ತಾರೆ. ಎಲ್ಲವೂ ಗುರುವಿಗೆ ಸ್ವಂತವಾಗುತ್ತದೆ. ಇದು ಬ್ರಹ್ಮಚಾರಿ ಬದುಕು. ಇದುವೇ ತಪಸ್ಯ. ತಪೋ ದಿವ್ಯಮ್ (ಶ್ರೀ.ಭಾ 5.5.1). ಅದು ವೈದಿಕ ನಾಗರಿಕತೆ… ಜೀವನದ ಪ್ರಾರಂಭದಿಂದಲೂ ಮಕ್ಕಳು ತಪಸ್ಯ, ಬ್ರಹ್ಮಚರ್ಯೆಯಲ್ಲಿ ತರಬೇತಿ ಪಡೆಯಬೇಕು. ಬ್ರಹ್ಮಚರ್ಯೆ. ಒಬ್ಬ ಬ್ರಹ್ಮಚಾರಿ ಯಾವ ಯುವತಿಯನ್ನೂ ನೋಡಬಾರದು. ಗುರುವಿನ ಹೆಂಡತಿ ಯುವತಿಯಾದರೆ, ಅವರ ಹತ್ತಿರ ಹೋಗಬಾರದು. ಈ ನಿಬಂಧನೆಗಳಿವೆ. ಈಗ ಎಲ್ಲಿವೇ ಆ ಬ್ರಹ್ಮಚರ್ಯ? ಬ್ರಹ್ಮಚಾರಿಯೇ ಇಲ್ಲ. ಇದು ಕಲಿಯುಗ. ತಪಸ್ಯೆಯಿಲ್ಲ.