KN/Prabhupada 0157 - ಹೃದಯ ಪರಿಶುದ್ಧವಾಗದೆ ಹರಿ ಯಾರೆಂಬುದು ನಿಮಗೆ ಅರ್ಥವಾಗುವುದಿಲ್ಲ



Lecture on SB 6.2.11 -- Vrndavana, September 13, 1975

ನೀವು ಶಾಸ್ತ್ರಗಳಲ್ಲಿನ ಆಜ್ಞೆಯನ್ನು ಒಪ್ಪಿಕೊಳ್ಳದಿದ್ದರೆ, ವಿಶೇಷವಾಗಿ ಪರಮಾತ್ಮನಾದ ಕೃಷ್ಣನು ನಿಮಗೆ ಭಗವದ್ಗೀತೆಯಲ್ಲಿ ಉಪದೇಶ ನೀಡುತ್ತಿರುವಾಗ... ಅದೆ ಎಲ್ಲಾ ಶಾಸ್ತ್ರದ ಸಾರವಾಗಿದೆ. ನೀವು ಅದನ್ನು ಸ್ವೀಕರಿಸಿ. ಆಗ ನೀವು ಸಂತೋಷವಾಗಿರುತ್ತೀರಿ. ಇಲ್ಲದಿದ್ದರೆ ಇಲ್ಲ. ಆದ್ದರಿಂದ, ಇಲ್ಲಿ ಅಘವಾನ್, ಒಬ್ಬ ಪಾಪಿ ಮನುಷ್ಯ, ಕೇವಲ ಈ ಧಾರ್ಮಿಕ ವಿಧಿಗಳಿಂದ, ಪ್ರಾಯಶ್ಚಿತ್ತದಿಂದ, ಅಥವಾ ಕೆಲವು ವ್ರತಗಳನ್ನು ಪಾಲಿಸುವುದರಿಂದ ಶುದ್ಧನಾಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹಾಗಾದರೆ ಅದು ಹೇಗೆ ಸಾಧ್ಯ? ಏಕೆಂದರೆ ಎಲ್ಲರೂ... ಯಥಾ ಹರೇರ್ ನಾಮ. ಆದ್ದರಿಂದ, ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್, ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ (ಚೈ.ಚ ಆದಿ 17.21), ಇದನ್ನು ಶಿಫಾರಸು ಮಾಡಲಾಗಿದೆ, ಅದೇ ವಿಷಯ. ಶಾಸ್ತ್ರದ ಆದೇಶಗಳು ವಿರೋಧಾತ್ಮಕವಾಗಿರುವುದನ್ನು ನೀವು ಎಂದಿಗೂ ಕಾಣುವುದಿಲ್ಲ. ಅಗ್ನಿ ಪುರಾಣದಲ್ಲಿ ಮತ್ತು ಶ್ರೀಮದ್-ಭಾಗವತದಲ್ಲಿಯೂ ಇದೇ ವಿಷಯವನ್ನು ಹೇಳಲಾಗಿದೆ. ಅಗ್ನಿ ಪುರಾಣವು ಹೇಳುತ್ತದೆ, ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್, ಮತ್ತು ಶ್ರೀಮದ್ ಭಾಗವತದಲ್ಲಿ ಇದನ್ನು ಹೇಳಲಾಗಿದೆ, ಯಥಾ ಹರೇರ್ ನಾಮ-ಪದೈರ್ ಉದಾಹೃತೈಃ ತದ್ ಉತ್ತಮಶ್ಲೋಕ-ಗುಣೋಪಲಂಭಕಂ (ಶ್ರೀ.ಭಾ 6.2.11). ಹರೇರ್ ನಾಮ ಎಂದರೆ ಪವಿತ್ರ ನಾಮದ ಪಠಣ. ಅದು ಸರಳವಾಗಿದೆ. ಆದರೆ ನೀವು ಹರೇರ್ ನಾಮವನ್ನು ಜಪಿಸಿದಾಗ ಹರಿ ಯಾರು, ಅವನ ರೂಪವೇನು, ಅವನ ಗುಣವೇನು, ಅವನ ಲೀಲೆಗಳೇನು ಎಂದು ಕ್ರಮೇಣ ನೀವು ಅರ್ಥಮಾಡಿಕೊಳ್ಳುತ್ತೀರಿ. ಆಗ ನೀವು ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಹರೇರ್ ನಾಮವಿಲ್ಲದೆ ನಿಮ್ಮ ಹೃದಯವು ಕೊಳಕಾಗಿರುತ್ತದೆ, ಚೇತೋ-ದರ್ಪಣ-ಮಾರ್ಜನಮ್ (ಚೈ,ಚ ಅಂತ್ಯ 20.12) - ನಿಮ್ಮ ಹೃದಯವನ್ನು ಶುದ್ಧೀಕರಿಸದ ಹೊರತು ಹರಿ ಯಾರು, ಅವನ ಹೆಸರೇನು, ಅವನ ರೂಪವೇನು, ಅವನ ಗುಣವೇನು, ಅವನ ಲೀಲೆಗಳೇನು ಎಂದು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಅತಃ ಶ್ರೀ-ಕೃಷ್ಣ-ನಾಮಾದಿ ನ ಭವೇದ್ ಗ್ರಾಹ್ಯಂ ಇಂದ್ರಿಯೈಃ (ಚೈ.ಚ ಮಧ್ಯ 17.136). ನಿಮ್ಮ ಮೊಂಡಾದ ಅಸಂಬದ್ಧ ಇಂದ್ರಿಯಗಳನ್ನು ನೀವು ಬಳಸಿದರೆ, ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಜನರು ಕೃಷ್ಣನನ್ನು ಮತ್ತು ಹರಿ-ನಾಮದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರ ಇಂದ್ರಿಯಗಳು ಮೊಂಡಾಗಿರುವುದರಿಂದ, ಈ ಮಾಯೆಯ ಗುಣಗಳಿಂದ ಕಲುಷಿತಗೊಂಡಿರುವುದರಿಂದ, ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದೊಂದೇ ದಾರಿ, ಚೇತೋ-ದರ್ಪಣ-ಮಾರ್ಜನಮ್ ಭವ ಮಹಾ ದಾವಾಗ್ನಿ ನಿರ್ವಾಪಣಂ (ಚೈ.ಚ ಅಂತ್ಯ 20.12). ಆದ್ದರಿಂದ, ನೀವು ಶುದ್ಧರಾಗಬೇಕೆಂದರೆ ಇದು ಏಕೈಕ ವಿಧಾನವಾಗಿದೆ. ಹರೇ ಕೃಷ್ಣ ಜಪ. ನಂತರ ನೀವು ಕ್ರಮೇಣ ಶುದ್ಧರಾಗುತ್ತೀರಿ. ಪುಣ್ಯ-ಶ್ರವಣ-ಕೀರ್ತನಃ. ಪುಣ್ಯ-ಶ್ರವಣ-ಕೀರ್ತನಃ. ಶೃಣ್ವತಾಮ್ ಸ್ವ-ಕಥಾಃ ಕೃಷ್ಣಃ ಪುಣ್ಯ-ಶ್ರವಣ-ಕೀರ್ತನಃ. (ಶ್ರೀ.ಭಾ 1.2.17). ನೀವು ಕೇಳಿದರೆ, ನೀವು ಕೃಷ್ಣನ ಜಪಮಾಡಿದರೆ, ಉತ್ತಮಶ್ಲೋಕ, ತದ್ ಉತ್ತಮಶ್ಲೋಕ-ಗುಣೋಪಲಂಭಕಂ, ಎಷ್ಟೋ ಪ್ರಯೋಜನಗಳಿವೆ. ಆದ್ದರಿಂದ, ಹರೇ ಕೃಷ್ಣ ಆಂದೋಲನವು ತುಂಬಾ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೀರ್ತನೀಯಃ ಸದಾ ಹರಿಃ,

ತೃಣಾದ್ ಅಪಿ ಸುನೀಚೇನ
ತರೋರ್ ಅಪಿ ಸಹಿಷ್ಣುನಾ
ಅಮಾನಿನ ಮಾನದೇನ
ಕೀರ್ತನೀಯಃ ಸದಾ ಹರಿಃ
(ಚೈ.ಚ ಆದಿ 17.31)

ಇದು ಚೈತನ್ಯ ಮಹಾಪ್ರಭುಗಳ ಆದೇಶ. ಕಷ್ಟ... ಇದು ಪದಂ ಪದಂ ಯದ್ ವಿಪದಮ್ (ಶ್ರೀ.ಭಾ 10.14.58). ಈ ಭೌತಿಕ ಜಗತ್ತಿನಲ್ಲಿ ಕೇವಲ ವಿಪದವಿದೆ. ಸಂಪದವಿಲ್ಲ. ಮೂರ್ಖತನದಿಂದ ನಾವು, "ಈಗ ನಾನು ತುಂಬಾ ಚೆನ್ನಾಗಿದ್ದೀನಿ", ಎಂದು ಭಾವಿಸುತ್ತೇವೆ. ಏನು ಚೆನ್ನಾಗಿದೆ? ಮುಂದಿನ ಕ್ಷಣ ನೀನು ಸಾಯಬಹುದು. ಏನು ಚೆನ್ನಾಗಿದೆ? ಆದರೆ ಈ ಮೂರ್ಖರು, "ಹೌದು, ನಾನು ಚೆನ್ನಾಗಿದ್ದೇನೆ", ಎಂದು ಹೇಳುತ್ತಾರೆ. ನೀವು ಯಾರನ್ನಾದರೂ, "ನೀವು ಹೇಗಿದ್ದೀರಿ?", ಎಂದು ಕೇಳಿದರೆ "ಓ, ತುಂಬಾ ಚೆನ್ನಾಗಿದ್ದೇನೆ", ಎನ್ನುತ್ತಾರೆ. ಅದು ಏನು ಒಳ್ಳೆಯದು? ನೀನು ನಾಳೆ ಸಾಯಲಿರುವೆ. ಆದರೂ ಚೆನ್ನಾಗಿದ್ದೇನೆ. ಅಷ್ಟೇ. ಹೀಗೆ ನಡೆಯುತ್ತಿದೆ. ಆದ್ದರಿಂದ, ಇದು ಪದಂ ಪದಂ ಯದ್ ವಿ... ಕೆಲವರು ಸಂತೋಷವಾಗಿರಲು ವೈಜ್ಞಾನಿಕ ಸಂಶೋಧನೆಗಳನ್ನು ಮಾಡುತ್ತಿದ್ದಾರೆ, ಆದರೆ ಈ ಧೂರ್ತರಿಗೆ ಸಾವನ್ನು ಹೇಗೆ ನಿಲ್ಲಿಸುವುದು ಎಂದು ತಿಳಿದಿಲ್ಲ. ಹಾಗಾದರೆ ಏನು ಚೆನ್ನಾಗಿರುವುದು? ಆದರೆ ಅವರಿಗೆ ಅರ್ಥ ಮಾಡಿಕೊಳ್ಳುವ ಮೆದುಳಿಲ್ಲ. ಆದರೆ ಕೃಷ್ಣ ಹೇಳುತ್ತಾನೆ, "ಇವು ಸಮಸ್ಯೆಗಳು, ನನ್ನ ಪ್ರೀತಿಯ ಮಾನ್ಯರೇ. ನೀವು ವಿಜ್ಞಾನಿಗಳು, ನೀವು ಅನೇಕ ವಿಷಯಗಳಿಗೆ ಶ್ರಮಿಸುತ್ತಿದ್ದೀರಿ." ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಶಾನುದರ್ಶನಂ (ಭ.ಗೀ 13.9). ನಿಮ್ಮ ಸಮಸ್ಯೆ ಏನೆಂದು ಮೊದಲು ತಿಳಿದುಕೊಳ್ಳಿ. ಜನ್ಮ-ಮೃತ್ಯು-ಜರಾ-ವ್ಯಾಧಿ. ನಾವು ಹುಟ್ಟಬೇಕು, ಸಾಯಬೇಕು, ರೋಗದಿಂದ ನರಳಬೇಕು, ವೃದ್ಧರಾಗಬೇಕು. ಅದನ್ನು ಮೊದಲು ನಿಲ್ಲಿಸಿ, ನಂತರ ವೈಜ್ಞಾನಿಕ ಪ್ರಗತಿಯ ಬಗ್ಗೆ ಮಾತನಾಡಿ. ಇಲ್ಲದಿದ್ದರೆ ನೀವು ಮೂರ್ಖರು. ತುಂಬ ಧನ್ಯವಾದಗಳು.