KN/Prabhupada 0184 - ನಿಮ್ಮ ಮೋಹವನ್ನು ಭೌತಿಕ ಶಬ್ದದಿಂದ ಆಧ್ಯಾತ್ಮಿಕ ಶಬ್ದಕ್ಕೆ ವರ್ಗಾಯಿಸಿ



Lecture on SB 3.26.47 -- Bombay, January 22, 1975

ಆದ್ದರಿಂದ, ಶಬ್ದ ಬಹಳ ಮುಖ್ಯವಾದ ವಿಷಯ. ಈ ಭೌತಿಕ ಜಗತ್ತಿನಲ್ಲಿ ನಮ್ಮ ಬಂಧನಕ್ಕೆ ಶಬ್ದವೇ ಕಾರಣ. ದೊಡ್ಡ, ದೊಡ್ಡ ನಗರಗಳಲ್ಲಿರುವವರು ಸಿನೆಮಾ ಕಲಾವಿದರ ಧ್ವನಿಗೆ ಮೋಹಗೊಂಡಂತೆ. ಅಷ್ಟೇ ಅಲ್ಲ, ರೇಡಿಯೋ ಸಂದೇಶದ ಮೂಲಕ ನಾವು ಇನ್ನೂ ಅನೇಕ ವಿಷಯಗಳು ಕೇಳುತ್ತೇವೆ. ಆ ಶಬ್ದಕ್ಕೆ ಮೋಹ. ಮತ್ತು ಅದು ಭೌತಿಕ ಶಬ್ದವಾಗಿರುವುದರಿಂದ, ನಾವು ಭೌತಿಕವಾಗಿ ಸಿಲುಕಿಕೊಳ್ಳುತ್ತಿದ್ದೇವೆ, ಹೆಚ್ಚು ಹೆಚ್ಚು ಸಿಕ್ಕಿಹಾಕಿಕೊಳ್ಳುತ್ತಿದ್ದೇವೆ. ಕೆಲವು ನಟಿಯರು, ಕೆಲವು ಸಿನಿಮಾ ಕಲಾವಿದರು ಹಾಡುತ್ತಾರೆ. ಜನರು ಆ ಹಾಡನ್ನು ಕೇಳಲು ಎಷ್ಟು ಇಷ್ಟಪಡುತ್ತಾರೆ ಎಂದರೆ ಒಬ್ಬ ಕಲಾವಿದನಿಗೆ ಒಂದು ಹಾಡಿಗೆ ಹದಿನೈದು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಬಾಂಬೆಯಲ್ಲಿ ಅನೇಕ ಗಾಯಕರಿದ್ದಾರೆ. ಆದ್ದರಿಂದ, ಭೌತಿಕ ಶಬ್ದಕ್ಕೆ ನಾವು ಎಷ್ಟು ಆಕರ್ಷಿತರಾಗಿದ್ದೇವೆ ಎಂದು ನೋಡಿ. ಅಂತೆಯೇ, ಅದೇ ಬಾಂಧವ್ಯದಿಂದ ನಾವು ಹರೇ ಕೃಷ್ಣ ಮಹಾ-ಮಂತ್ರವನ್ನು ಕೇಳಿದರೆ ನಾವು ಮುಕ್ತರಾಗುತ್ತೇವೆ. ಅದೇ ಶಬ್ದ, ಆದರೆ ಒಂದು ಭೌತಿಕ ಇನ್ನೊಂದು ಆಧ್ಯಾತ್ಮಿಕ. ಆದ್ದರಿಂದ, ನೀವು ಈ ಆಧ್ಯಾತ್ಮಿಕ ಶಬ್ದಕ್ಕೆ ಆಕರ್ಷಿತರಾಗಲು ಅಭ್ಯಾಸ ಮಾಡಿ. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ.

ಚೇತೋ-ದರ್ಪಣ-ಮಾರ್ಜನಂ ಭವ-ಮಹಾ-ದಾವಗ್ನಿ-ನಿರ್ವಾಪಣಂ
ಶ್ರೇಯಃ-ಕೈರವ-ಚಂದ್ರಿಕಾ-ವಿತರಣಂ ವಿದ್ಯಾ-ವಧೂ-ಜೀವನಂ,
ಆನಂದಾಂಬುಧಿ-ವರ್ಧನಂ ಪ್ರತಿ-ಪದಂ ಪೂರ್ಣಾಮೃತಾಸ್ವಾದನಂ
ಸರ್ವಾತ್ಮ-ಸ್ನಪಣಂ ಪರಂ ವಿಜಯತೇ ಶ್ರೀ-ಕೃಷ್ಣ-ಸಂಕೀರ್ತನಂ
(ಚೈ.ಚ ಅಂತ್ಯ 20.12)

ಆದ್ದರಿಂದ, ಕೃಷ್ಣ ಪ್ರಜ್ಞೆಯ ಆಂದೋಲನವು ಈ ಉದ್ದೇಶಕ್ಕಾಗಿಯೇ ಇರುವುದು. "ನಿಮಗೆ ಈಗಾಗಲೇ ಶಬ್ದದ ಬಗ್ಗೆ ಮೋಹವಿದೆ. ಈಗ ಈ ಮೋಹವನ್ನು ಆಧ್ಯಾತ್ಮಿಕ ಶಬ್ದಕ್ಕೆ ವರ್ಗಾಯಿಸಿ. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ." ಇದುವೇ ಹರೇ ಕೃಷ್ಣ ಚಳುವಳಿ, ಭೌತಿಕ ಶಬ್ದದಿಂದ ಆಧ್ಯಾತ್ಮಿಕ ಶಬ್ದಕ್ಕೆ ಮೋಹವನ್ನು ಹೇಗೆ ವರ್ಗಾಯಿಸುವುದು ಎಂದು ಜನರಿಗೆ ಕಲಿಸುತ್ತದೆ. ಆದ್ದರಿಂದ, ‘ಗೋಲೋಕೇರ ಪ್ರೇಮ-ಧನ, ಹರಿ-ನಾಮ-ಸಂಕೀರ್ತನ, ರತಿ ನಾ ಜನ್ಮಿಲೋ ಕೆನೆ ತಾಯ್’, ಎಂದು ನರೋತ್ತಮ ದಾಸ ಠಾಕುರ ಹಾಡುತ್ತಾರೆ. ಆಧ್ಯಾತ್ಮಿಕ ಪ್ರಪಂಚದಿಂದ ಬರುವ ಈ ಶಬ್ದ, ಗೋಲೋಕೇರ ಪ್ರೇಮ-ಧನ, ಜಪಿಸುವ ಮೂಲಕ, ಈ ಶಬ್ದವನ್ನು ಕೇಳುವ ಮೂಲಕ, ನಾವು ದೇವರಿಗಾಗಿ ನಮ್ಮ ಮೂಲ ಸುಪ್ತ ಪ್ರೀತಿಯನ್ನು ಬೆಳೆಸಿಕೊಳ್ಳುತ್ತೇವೆ. ಅದು ಬೇಕಾಗಿದೆ. ಪ್ರೇಮಾ ಪುಮ್-ಆರ್ಥೋ ಮಹಾನ್. ಭೌತಿಕ ಜಗತ್ತಿನಲ್ಲಿ ನಾವು ಧರ್ಮಾರ್ಥ-ಕಾಮ-ಮೋಕ್ಷವನ್ನು (ಶ್ರೀ.ಭಾ 4.8.41) ಬಹಳ ಮುಖ್ಯವೆಂದು ಒಪ್ಪಿಕೊಳ್ಳುತ್ತಿದ್ದೇವೆ. ಪುರುಷಾರ್ಥ. ಧರ್ಮ, ಧಾರ್ಮಿಕರಾಗಲು ಮತ್ತು ಧಾರ್ಮಿಕರಾಗುವ ಮೂಲಕ, ನಾವು ನಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತೇವೆ. ಧನಂ ದೇಹಿ, ರೂಪಂ ದೇಹಿ, ಯಶೋ ದೇಹಿ, ದೇಹಿ ದೇಹಿ. ಕಾಮ. ದೇಹಿ ದೇಹಿ, ಏಕೆ? ಕಾಮ, ನಮ್ಮ ಆಸೆಗಳನ್ನು, ಕಾಮದ ಆಸೆಗಳನ್ನು ಪೂರೈಸಲು. ಧರ್ಮಾರ್ಥ-ಕಾಮ, ಮತ್ತು ನಮಗೆ ಭೌತಿಕವಾಗಿ ಹತಾಶೆಯಾದಾಗ ಅಥವಾ ಆಸೆಗಳನ್ನು ಪೂರೈಸಲು ಅಸಮರ್ಥರಾದಾಗ, ದೇವರೊಂದಿಗೆ ಒಂದಾಗಬೇಕೆಂದು, ಮೋಕ್ಷವು ಬೇಕೆಂದು ನಾವು ಬಯಸುತ್ತೇವೆ. ಇದು ನಾಲ್ಕು ರೀತಿಯ ಭೌತಿಕ ವ್ಯವಹಾರವಾಗಿದೆ. ಆದರೆ ಆಧ್ಯಾತ್ಮಿಕ ವ್ಯವಹಾರವು ಪ್ರೇಮಾ ಪುಮ್-ಅರ್ಥೋ ಮಹಾನ್ ಆಗಿದೆ. ಪರಮಾತ್ಮನ ಪ್ರೀತಿಯನ್ನು ಸಾಧಿಸಲು, ಅದು ಅತ್ಯುನ್ನತ ಪರಿಪೂರ್ಣತೆಯಾಗಿದೆ. ಪ್ರೇಮಾ ಪುಮ್-ಆರ್ಥೋ ಮಹಾನ್.

‘ಪ್ರೇಮಾ ಪುಮ್-ಅರ್ಥೋ ಮಹಾನ್’, ಜೀವನದ ಈ ಗುರಿಯನ್ನು ಸಾಧಿಸಲು, ಈ ಯುಗದಲ್ಲಿ, ವಿಶೇಷವಾಗಿ ಕಲಿಯುಗದಲ್ಲಿ, ತುಂಬಾ ಕಷ್ಟ ಏಕೆಂದರೆ ನಾವು ಬೇರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲದ ಕಾರಣ. ಈ ಯುಗದಲ್ಲಿ ತುಂಬಾ ಅಡೆತಡೆಗಳಿವೆ. ಆದ್ದರಿಂದ, ಕಾಲೌ... ಈ ವಿಧಾನ, ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ: (ಚೈ.ಚ ಆದಿ 17.21) "ಹರೇ ಕೃಷ್ಣ ಮಂತ್ರವನ್ನು ಪಠಿಸಿ," ಕೇವಲಂ, "ಮಾತ್ರ". ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ. ಕಲಿಯುಗದಲ್ಲಿ, ಈ ಭೌತಿಕ ಬಂಧನದಿಂದ ಹೇಗೆ ಮುಕ್ತಿ ಪಡೆಯುವುದು ಎಂಬುದು ಮುಖ್ಯ ವ್ಯವಹಾರವಾಗಿದೆ... ಭೂತ್ವ ಭೂತ್ವ ಪ್ರಲೀಯತೆ (ಭ.ಗೀ 8.19). ಅವರ ನಿಜವಾದ ಸಂಕಟ ಏನು ಎಂದು ಜನರಿಗೆ ಅರ್ಥವಾಗುವುದಿಲ್ಲ. ಕೃಷ್ಣನು ಹೇಳುತ್ತಾನೆ, ಪರಮಾತ್ಮನೇ ಕುದ್ದಾಗಿ ಹೇಳುತ್ತಾನೆ, "ಇವು ನಿಮ್ಮ ದುಃಖಗಳು." ಏನು? ಜನ್ಮ-ಮೃತ್ಯು-ಜರಾ-ವ್ಯಾಧಿ (ಭ.ಗೀ 13.9). "ಹುಟ್ಟು ಮತ್ತು ಸಾವಿನ ಪುನರಾವರ್ತನೆ. ಇದು ನಿಮ್ಮ ಜೀವನದ ನಿಜವಾದ ದುಃಖ." ಈ ದುಃಖ, ಆ ದುಃಖ ಎಂದು ನೀವು ಏನು ಯೋಚಿಸುತ್ತಿದ್ದೀರೋ ಅವೆಲ್ಲವೂ ತಾತ್ಕಾಲಿಕ. ಅವೆಲ್ಲವೂ ಭೌತಿಕ ಪ್ರಕೃತಿಯ ನಿಯಮಗಳ ಅಡಿಯಲ್ಲಿವೆ. ನೀವು ಅದರಿಂದ ಹೊರಬರಲು ಸಾಧ್ಯವಿಲ್ಲ. ಪ್ರಕೃತೇಃ ಕ್ರಿಯಮಾನಾಣಿ ಗುಣೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ಪ್ರಕೃತಿಯ ಭೌತಿಕ ಗುಣಗಳನ್ನು ನೀವು ಕಲುಷಿತಗೊಳಿಸಿರುವುದರಿಂದ ಪ್ರಕೃತಿಯು ಏನನ್ನಾದರೂ ಮಾಡಲು ನಿಮ್ಮನ್ನು ಒತ್ತಾಯಿಸುತ್ತದೆ. ಆದ್ದರಿಂದ, ನೀವು ಈ ಭೌತಿಕ ಪ್ರಕೃತಿಯ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಬೇಕು. ಮತ್ತು ನೀವು ಈ ಭೌತಿಕ ಪ್ರಕೃತಿಯ ಅಡಿಯಲ್ಲಿ ಇರುವವರೆಗೆ, ನೀವು ಈ ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ರೋಗವನ್ನು ಸ್ವೀಕರಿಸಬೇಕು. ಇದು ನಿಮ್ಮ ನಿಜವಾದ ದುಃಖ.