KN/Prabhupada 0189 - ಭಕ್ತನನ್ನು ಮೂರು ಗುಣಗಳಿಗಿಂತ ಮೇಲಿರಿಸು



Lecture on SB 6.1.46 -- San Diego, July 27, 1975

ನೀವು ಪ್ರಕೃತಿಯ ನಿಯಮವನ್ನು ಬದಲಾಯಿಸಲು ಸಾಧ್ಯವಿಲ್ಲ. ಅಸ್ತಿತ್ವಕ್ಕಾಗಿ ಹೋರಾಟ: ನಾವು ಪ್ರಕೃತಿಯ ನಿಯಮಗಳನ್ನು ಸೋಲಿಸಲು ಪ್ರಯತ್ನಿಸುತ್ತಿದ್ದೇವೆ. ಅದು ಸಾಧ್ಯವಿಲ್ಲ. ದೈವೀ ಹಿ ಏಷಾ ಗುಣಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14). ಇವು ಅಧ್ಯಯನದ ವಿಷಯವು. ಏಕೆ ಎಲ್ಲರೂ ಸ್ವಲ್ಪ ದುಃಖಕರ ಮತ್ತು ಸ್ವಲ್ಪ ಸಂತೋಷಕರವಾಗಿರುತ್ತಾರೆ? ಈ ಗುಣಗಳ ಕಾರಣದಿಂದ. ಆದುದರಿಂದ, ಇಲ್ಲಿ ಹೇಳಲಾಗಿದೆ, "ನಾವು ನಮ್ಮ ಜೀವಿತಾವಧಿಯಲ್ಲಿ ಗಮನಿಸಿದರೆ ಇಲ್ಲಿ ಪ್ರಭೇದಗಳಿವೆ. ಅಂತೆಯೇ ಗುಣ-ವೈಚಿತ್ರಯಾತ್, ಗುಣಗಳ ಪ್ರಭೇದಗಳಿವೆ, ತಥಾನ್ಯತ್ರಾನುಮೀಯತೇ. ‘ಅನ್ಯತ್ರ’ ಎಂದರೆ ಮುಂದಿನ ಜನ್ಮ, ಅಥವಾ ಮುಂದಿನ ಗ್ರಹ, ಅಥವಾ ಮುಂದಿನ ಯಾವುದಾದರೂ ಸರಿ. ಎಲ್ಲವನ್ನೂ ನಿಯಂತ್ರಿಸಲಾಗುತ್ತಿದೆ. ತ್ರೈಗುಣ್ಯ-ವಿಷಯ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ (ಭ.ಗೀ 2.45). "ಇಡೀ ಭೌತಿಕ ಪ್ರಪಂಚವು ಈ ಮೂರು ಗುಣಗಳಿಂದ ನಿಯಂತ್ರಿಸಲ್ಪಡುತ್ತಿದೆ", ಎಂದು ಕೃಷ್ಣನು ಅರ್ಜುನನಿಗೆ ತಿಳಿಸುತ್ತಾನೆ, ಗುಣ-ವೈಚಿತ್ರಯಾತ್. "ಆದ್ದರಿಂದ, ನೀನು ನಿಸ್ತ್ರೈಗುಣ್ಯನಾದರೆ, ಆಗ ಈ ಮೂರು ಗುಣಗಳು ನಿಶ್ಕ್ರಿಯವಾಗುತ್ತದೆ.” ನಿಸ್ತ್ರೈಗುಣ್ಯೋ ಭವಾರ್ಜುನ. ಹಾಗಾದರೆ ನೀವು ಈ ಮೂರು ಗುಣಗಳ ಕ್ರಿಯೆಯನ್ನು ಹೇಗೆ ನಿಲ್ಲಿಸಬಹುದು? ಇದನ್ನು ಕೂಡ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ:

ಮಾಂ ಚ 'ವ್ಯಭಿಚಾರಿಣಿ
ಭಕ್ತಿ-ಯೋಗೇನ ಯಃ ಸೇವತೇ
ಸ ಗುಣಾನ್ ಸಮತೀತ್ಯೈತಾನ್
ಬ್ರಹ್ಮ-ಭೂಯಾಯ ಕಲ್ಪತೇ
(ಭ.ಗೀ 14.26)

ನೀವು ಅವಿರತವಾಗಿ, ಯಾವುದೇ ನಿಲುಗಡೆಯಿಲ್ಲದೆ ಶುದ್ಧ ಭಕ್ತಿ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ, ನೀವು ಯಾವಾಗಲೂ ಈ ಮೂರು ಗುಣಗಳನ್ನು ಮೀರಿ ಅತೀಂದ್ರಿಯರಾಗಿ ಉಳಿಯುತ್ತೀರಿ. ಆದ್ದರಿಂದ, ಭಕ್ತನನ್ನು ಮೂರು ಗುಣಗಳಿಗಿಂತ ಮೇಲಿರಿಸುವುದೇ ನಮ್ಮ ಕೃಷ್ಣ ಪ್ರಜ್ಞೆ ಆಂದೋಲನದ ಗುರಿಯು. ನೀವು ಸಮುದ್ರದಲ್ಲಿ ಬಿದ್ದರೆ, ಅದು ತುಂಬಾ ಅಪಾಯಕಾರಿ ಸ್ಥಿತಿ. ಆದರೆ ಯಾರಾದರೂ ನಿಮ್ಮನ್ನು ಸಮುದ್ರದಿಂದ ಮೇಲಕ್ಕೆತ್ತಲು ಮತ್ತು ಸಮುದ್ರದ ನೀರಿನಿಂದ ಒಂದು ಇಂಚು ಮೇಲೆ ಇರಿಸಲು ಸಹಾಯ ಮಾಡಿದರೆ ಯಾವುದೇ ಅಪಾಯವಿಲ್ಲ. ನಿಮ್ಮ ಜೀವ ಉಳಿಯುತ್ತದೆ.

ಆದ್ದರಿಂದ, ಆ ಗುಣ-ವೈಚಿತ್ರ್ಯಯಾತ್ ಬೇಕಾಗಿದೆ. ನೀವು ಜೀವನದ ಈ ವೈಚಿತ್ರಯಗಳನ್ನು — ಜನನ, ಮರಣ, ವೃದ್ಧಾಪ್ಯ, ಮತ್ತು ರೋಗ — ಇವುಗಳಿಂದ, ಮತ್ತು ಹಲವಾರು ರೀತಿಯ ಜನ್ಮಗಳನ್ನು ಸ್ವೀಕರಿಸುವ ಕ್ರಿಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಬಯಸಿದರೆ... ಅಲ್ಲಿ ನಡೆಯುವಾಗ, ನೀವು ಕ್ಯಾಲಿಫೋರ್ನಿಯಾದಲ್ಲಿ ಐದು ಸಾವಿರ ವರ್ಷಗಳಿಂದ ಬದುಕಿರುವ ಮರಗಳ ಬಗ್ಗೆ ಹೇಳಿದಿರಿ. ಇದು ಜೀವನದ ಇನ್ನೊಂದು ವೈವಿಧ್ಯತೆ. ಜನರು ಬಹಳ ದೀರ್ಘಕಾಲ ಬದುಕಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ನೋಡಿ, ಪ್ರಾಕೃತಿಕವಾಗಿ, ಐದು ಸಾವಿರ ವರ್ಷಗಳ ಮರವಿದೆ. ಹಾಗಾದರೆ, ಕಾಡಿನಲ್ಲಿ ಐದು ಸಾವಿರ ವರ್ಷಗಳ ಕಾಲ ನಿಲ್ಲುವಂತಹ ಜೀವನವು ತುಂಬಾ ಲಾಭದಾಯಕವಾಗಿದೆಯೇ? ಆದ್ದರಿಂದ, ನೀವು ದೇವತೆಯಾದರು, ಮರವಾದರು, ಅಥವಾ ಏನಾದರೂ ಸರಿ, ಈ ಭೌತಿಕ ಪ್ರಪಂಚದೊಳಗಿನ ಯಾವುದೇ ವೈವಿಧ್ಯಮಯ ಜೀವನವು ಒಳ್ಳೆಯದಲ್ಲ. ಅದುವೇ ಶಿಕ್ಷಣ. ಆದ್ದರಿಂದ, ದೇವತೆಯ ಜೀವನೆ ಅಥವಾ ನಾಯಿಯ ಜೀವನ, ಇಲ್ಲಿ ಎಲ್ಲವೂ ತೊಂದರೆದಾಯಕವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ದೇವತೆಗಳು ಸಹ ಅನೇಕ ಅಪಾಯಗಳಿಗೆ ಒಳಗಾಗುತ್ತಾರೆ. ಅನೇಕ ಬಾರಿ ಅವರು ಭಗವಂತನ ಬಳಿಗೆ ಹೋಗುತ್ತಾರೆ. ಆದ್ದರಿಂದ, ಇಲ್ಲಿ ನೀವು ಯಾವಾಗಲೂ ಅಪಾಯದಲ್ಲಿರುತ್ತೀರಿ. ಪದಂ ಪದಂ ಯದ್ ವಿಪದಾಂ (ಶ್ರೀ.ಭಾ 10.14.58). ಈ ಭೌತಿಕ ಪ್ರಪಂಚವನ್ನು ಅಪಾಯರಹಿತವಾಗಿಸಲು ಪ್ರಯತ್ನಿಸುವುದು ವ್ಯರ್ಥ. ಅದು ಸಾಧ್ಯವಿಲ್ಲ. ದೇಹಗಳ ವೈವಿಧ್ಯಗಳು, ಅಪಾಯಗಳ ವಿಧಗಳು, ವಿಪತ್ತುಗಳು, ಹೀಗೆ ಒಂದರ ನಂತರ ಒಂದು ಇರುವಂತೆ... ಆದ್ದರಿಂದ, ಈ ಭೌತಿಕ ವ್ಯವಹಾರವನ್ನು ನಿಲ್ಲಿಸುವಿದೇ ಉತ್ತಮ. ಅದುವೇ ವೈದಿಕ ನಾಗರಿಕತೆ. ಇಡೀ ವೈದಿಕ ನಾಗರೀಕತೆಯು ಈ ಉದ್ದೇಶವನ್ನು ಆಧರಿಸಿದೆ — " ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ಪುನರಾವರ್ತನೆ, ಈ ಅಸಂಬದ್ಧ ವ್ಯವಹಾರವನ್ನು ನಿಲ್ಲಿಸಿ.” ಆದ್ದರಿಂದ, ಕೃಷ್ಣನು ಹೇಳಿದನು, ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಷಾನುದರ್ಶನಂ (ಭ.ಗೀ 13.9). ಇದುವೇ ಜ್ಞಾನ. ಯಾವ ಜ್ಞಾನ, ಈ ತಾಂತ್ರಿಕ ಜ್ಞಾನ, ಈ ಜ್ಞಾನ? ನೀವು ಈ ವಿಷಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ, ಅದನ್ನು ಹೇಗೆ ನಿಲ್ಲಿಸುವುದು ಎಂಬುದು ನಮ್ಮ ಮುಖ್ಯ ವ್ಯವಹಾರ. ಮತ್ತು ಅವರು ಮೂರ್ಖ ಜನರಾಗಿರುವುದರಿಂದ, "ಇವುಗಳನ್ನು ನಿಲ್ಲಿಸಲಾಗುವುದಿಲ್ಲ. ನಾವು ಹುಟ್ಟು ಮತ್ತು ಸಾವಿನ ಈ ಪುನರಾವರ್ತನೆಯನ್ನು ಮುಂದುವರಿಸೋಣ, ಮತ್ತು ಪ್ರತಿ ಜನ್ಮದಲ್ಲೂ ನಮ್ಮ ಇರುವಿಕೆಗಾಗಿ ಹೋರಾಡೋಣ”, ಎಂದು ಅವರು ಭಾವಿಸುತ್ತಾರೆ. ಇದು ಭೌತಿಕ ನಾಗರಿಕತೆ, ಅಜ್ಞಾನ, ಜ್ಞಾನಶೂನ್ಯ.

ಆ ಜ್ಞಾನವನ್ನು ಭಗವಾನ್ ಶ್ರೀ ಕೃಷ್ಣ ನೀಡಿದ್ದಾನೆ, "ಇದೋ ಪರಿಹಾರ: ಜನ್ಮ ಕರ್ಮ ಚಾ ಮೇ ದಿವ್ಯಂ ಯೋ ಜನತಿ ತತ್ತ್ವತಃ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ (ಭ.ಗೀ 4.9)." ಸಮಸ್ಯೆಯು ಪುನರ್-ಜನ್ಮ, ಜನ್ಮ ಪುನರಾವರ್ತನೆ, ಮತ್ತು ನೀವು ಅದನ್ನು ನಿಲ್ಲಿಸಲು ಬಯಸಿದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆಗ ನೀವು ನಿಲ್ಲಿಸಲು ಸಾಧ್ಯವಾಗುತ್ತದೆ. ನೀವು ಕೃಷ್ಣನನ್ನು ಅರ್ಥಮಾಡಿಕೊಂಡ ತಕ್ಷಣ... ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಎಂದರೆ ನೀವು ಕುರುಡಾಗಿ ಒಪ್ಪಿಕೊಂಡರೂ ಸಹ ಅದು ಪ್ರಯೋಜನಕಾರಿಯೇ. ಕೃಷ್ಣನು ತಾನು ಪರಮಪ್ರಭುವೆಂದು ಅವನೇ ಹೇಳುತ್ತಾನೆ. ಆದ್ದರಿಂದ, ನೀವು ಅವನನ್ನು ಸ್ವೀಕರಿಸಿ. ಅಷ್ಟೇ. “ಕೃಷ್ಣ ದೇವೋತ್ತಮ ಪರಮ ಪುರುಷ", ಎಂದು ನೀವು ಕೇವಲ ನಂಬಿದರೆ ಸಾಕು. ಅದು ನಿಮ್ಮನ್ನು ಸಾಕಷ್ಟು ಮುಂದುವರಿದಂತೆ ಮಾಡುತ್ತದೆ. ಆದರೆ ಭೌತವಾದಿಗೆ ಇದು ಕಠಿಣ. ಆದ್ದರಿಂದ, ಕೃಷ್ಣನು ಹೇಳುತ್ತಾನೆ, ಬಹೂನಾಂ ಜನ್ಮನಾಂ ಅಂತೇ (ಭ.ಗೀ 7.19), "ಅನೇಕ, ಅನೇಕ ಜನ್ಮಗಳ ಪ್ರಯತ್ನದ ನಂತರ," ಬಹೂನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ, ಜ್ಞಾನವಾನ್, ನಿಜವಾದ ಜ್ಞಾನಿಯು ಕೃಷ್ಣನಿಗೆ ಶರಣಾಗುತ್ತಾನೆ. ಇಲ್ಲದಿದ್ದರೆ, ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ (ಭ.ಗೀ 7.15). "ಇಲ್ಲದಿದ್ದರೆ ಅವನು ದುಷ್ಟನಾಗಿ ಉಳಿಯುತ್ತಾನೆ ಮತ್ತು ಪಾಪಕಾರ್ಯಗಳಲ್ಲಿ ಸಿಲುಕುತ್ತಾನೆ, ಮಾನವಕುಲದ ಅತ್ಯಂತ ಕೆಳಮಟ್ಟದಲ್ಲಿ, ಜ್ಞಾನ ನಷ್ಟವಾಗುತ್ತದೆ." ನ ಮಾಂ ಪ್ರಪದ್ಯಂತೇ: "ಅವನು ಎಂದಿಗೂ ಕೃಷ್ಣನಿಗೆ ಶರಣಾಗುವುದಿಲ್ಲ."