KN/Prabhupada 0202 - ಬೋಧಕನಿಗಿಂತ ಉತ್ತಮವಾಗಿ ಪ್ರೀತಿಸುವವರು ಯಾರು



Morning Walk -- May 17, 1975, Perth

ಅಮೋಘ: ಬೆಂಕಿಕೋಳಿಗಳು ತಮ್ಮ ತಲೆಯನ್ನು ನೆಲದೊಳಗೆ ತೂರಿಸಿಕೊಳ್ಳುತ್ತವೆ.

ಪ್ರಭುಪಾದ: ಹೌದು.

ಪರಮಹಂಸ: ಆದರೆ ಸ್ವಲ್ಪ ಪ್ರಗತಿ ಇದೆ, ಏಕೆಂದರೆ ಹರೇ ಕೃಷ್ಣ ಚಳುವಳಿಯಲ್ಲಿ ಅನೇಕರು ಸೇರುತ್ತಿದ್ದಾರೆ.

ಪ್ರಭುಪಾದ: ಅವರು ನಿಜವಾದ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಭವ-ಮಹಾ-ದಾವಾಗ್ನಿ-ನಿರ್ವಾಪಣಮ್. ಅವರ ಈ ಸಾಂಸಾರಿಕ ಚಿಂತೆಗಳು ಮುಗಿಯುತ್ತವೆ. ಅವರು ಪ್ರಗತಿ ಸಾಧಿಸುತ್ತಿದ್ದಾರೆ. ಚೇತೋ-ದಪರ್ಣ-ಮಾರ್ಜನಂ ಭವ-ಮಹಾ-ದಾವಾಗ್ನಿ-ನಿರ್ವಾಪಣಮ್ (ಚೈ.ಚ ಅಂತ್ಯ 20.12). ಹರೇ ಕೃಷ್ಣ ಪಠಣದಿಂದ ಅವರ ಕೊಳಕು ಹೃದಯವು ಶುದ್ಧವಾಗುತ್ತದೆ ಮತ್ತು ಅದು ಸಂಪೂರ್ಣವಾಗಿ ಶುದ್ಧವಾದ ತಕ್ಷಣ ಅವರ ಭೌತಿಕ ಅಸ್ತಿತ್ವದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇನ್ನು ಆತಂಕ ವಿಲ್ಲ.

ಪರಮಹಂಸ: ಅವರು ಸಂತೋಷವಾಗಿ ಕಾಣುತ್ತಾರೆ, ಆದರೆ... ಕೃಷ್ಣನ ಭಕ್ತರು ಸಂತೋಷವಾಗಿರುತ್ತಾರೆ, ಆದರೆ ಅವರು ಹೆಚ್ಚು ಪ್ರಾಯೋಗಿಕ ಕೆಲಸ ಮಾಡುವುದಿಲ್ಲ. ಅವರು ಯಾವಾಗಲೂ ಹಾಡುತ್ತಾರೆ, ಕುಣಿಯುತ್ತಾರೆ, ಮತ್ತು ಹಣವನ್ನು ಕೇಳುತ್ತಾರೆ. ಆದರೆ ಅವರು ಪ್ರಾಯೋಗಿಕವಾಗಿ ಕೆಲಸ ಮಾಡುವುದಿಲ್ಲ. ನಾವು ಸಾಕಷ್ಟು ಪ್ರಾಯೋಗಿಕ ಕೆಲಸಗಳನ್ನು ಮಾಡುತ್ತಿದ್ದೇವೆ.

ಪ್ರಭುಪಾದ: ಕುಣಿಯುವುದು ಕೆಲಸ ಮಾಡಿದಂತಲ್ಲವೇ? ಮತ್ತು ಪುಸ್ತಕ ಬರೆಯುವುದು ಕೆಲಸ ಮಾಡಿದಂತಲ್ಲವೇ? ಪುಸ್ತಕ ಮಾರಾಟ ಕೆಲಸ ಮಾಡಿದಂತಲ್ಲವೇ? ಹಾಗಾದರೆ ಏನು ಕೆಲಸ ಮಾಡಿದಂತೆ? ಹಾಂ? ಕೋತಿಯ ಹಾಗೆ ಜಿಗಿಯುವುದೇ? ಹೌದೇ? ಅದು ಕೆಲಸ ಮಾಡಿದಂತೆಯೇ?

ಅಮೋಘ: ಆದರೆ ನಾವು ಪ್ರಾಯೋಗಿಕವಾಗಿ ಆಸ್ಪತ್ರೆಯಲ್ಲಿ ಅಥವಾ ಮದ್ಯವ್ಯಸನಿಗಳಿಗೆ ಸಹಾಯ ಮಾಡುತ್ತಿದ್ದೇವೆ...

ಪ್ರಭುಪಾದ: ಇಲ್ಲ, ಏನು... ನೀವು ಹೇಗೆ ಸಹಾಯ ಮಾಡುತ್ತಿದ್ದೀರಿ? ಒಬ್ಬರು ಆಸ್ಪತ್ರೆಗೆ ಹೋದರೆ ಅವರು ಸಾಯುವುದಿಲ್ಲ ಎಂದು ನೀವು ಭಾವಿಸುತ್ತೀರಾ? ಹಾಗಾದರೆ ನೀವು ಹೇಗೆ ಸಹಾಯ ಮಾಡುತ್ತಿದ್ದೀರಿ? ನೀವು ಸಹಾಯ ಮಾಡುತ್ತಿದ್ದೀರಿ ಎಂದು ಭಾವಿಸುತ್ತಿದ್ದೀರಿ.

ಅಮೋಘ: ಆದರೆ ಅವನು ಹೆಚ್ಚು ಕಾಲ ಬದುಕುತ್ತಾನೆ.

ಪ್ರಭುಪಾದ: ಅದು ಇನ್ನೊಂದು ಮೂರ್ಖತನ. ನೀವು ಎಷ್ಟು ಕಾಲ ಬದುಕುತ್ತೀರಿ? ಮರಣದ ಸಮಯ ಬಂದಾಗ, ನೀವು ಒಂದು ಕ್ಷಣವೂ ಹೆಚ್ಚು ಕಾಲ ಬದುಕುವುದಿಲ್ಲ. ಒಬ್ಬ ಮನುಷ್ಯನು ಸಾಯುವ ಕಾಲ ಸಮೀಪಿಸಿದಾಗ, ಅವನ ಜೀವನವು ಕೊನೆಗೊಳ್ಳುತ್ತದೆ. ನಿಮ್ಮ ಚುಚ್ಚುಮದ್ದು ಮತ್ತು ಔಷಧಿ ಒಂದು ನಿಮಿಷ ಜೀವನವನ್ನು ಹೆಚ್ಚಿಸಲು ಸಾಧ್ಯವೇ? ಯಾವುದಾದರೂ ಔಷಧಿ ಇದೆಯೇ?

ಅಮೋಘ: ಇದ್ದಂತೆ ತೋರುತ್ತಿದೆ.

ಪ್ರಭುಪಾದ: ಇಲ್ಲ...

ಅಮೋಘ : ಕೆಲವೊಮ್ಮೆ ಔಷಧಿ ಕೊಟ್ಟರೆ ಹೆಚ್ಚು ಕಾಲ ಬದುಕುತ್ತಾರೆ.

ಪರಮಹಂಸ: ಹೃದಯ ಕಸಿಯನ್ನು ಪರಿಪೂರ್ಣಗೊಳಿಸುವ ಮೂಲಕ ಜನರನ್ನು ಬದುಕುವಂತೆ ಮಾಡಬಹುದು ಎಂದು ಅವರು ಹೇಳುತ್ತಾರೆ...

ಪ್ರಭುಪಾದ: ಅವರು ಹೇಳಬಹುದು... ನಾವು ಅವರನ್ನು ಧೂರ್ತರು ಎಂದು ಪರಿಗಣಿಸುತ್ತೇವೆ. ನಾನು ಅವರ ಮಾತನ್ನು ಏಕೆ ಸ್ವೀಕರಿಸಲಿ? ನಾವು ಅವರನ್ನು ದುಷ್ಟರು ಎಂದು ಪರಿಗಣಿಸಬೇಕು, ಅಷ್ಟೆ. (ಯಾರೋ ಹಿನ್ನಲೆಯಲ್ಲಿ ಅಸಹ್ಯವಾಗಿ ಕೂಗುತ್ತಾರೆ-ಪ್ರಭುಪಾದರು ಅವನ ಕಡೆ ಅರಚುತ್ತಾರೆ) (ನಗು) ಮತ್ತೊಬ್ಬ ಧೂರ್ತ. ಅವನು ಜೀವನವನ್ನು ಆನಂದಿಸುತ್ತಿದ್ದಾನೆ. ಆದ್ದರಿಂದ, ಪ್ರಪಂಚವು ದುಷ್ಟರಿಂದ ತುಂಬಿದೆ. ಈ ಪ್ರಪಂಚದ ಬಗ್ಗೆ ನಾವು ಆಶಾವಾದಿಗಳಾಗದೆ ತುಂಬಾ ನಿರಾಶಾವಾದಿಗಳಾಗಿರಬೇಕು, ನೀವು ನಿರಾಶಾವಾದಿಗಳಾಗದಿದ್ದರೆ ನಿಜವಾದ ಮನೆಗೆ ಹಿಂತಿರುಗಲು ಸಾಧ್ಯವಾಗುವುದಿಲ್ಲ. ನಿಮಗೆ ಈ ಪ್ರಪಂಚದ ಬಗ್ಗೆ ಸ್ವಲ್ಪ ಆಕರ್ಷಣೆ ಇದ್ದರೆ - "ಇದು ಒಳ್ಳೆಯದು" – ಎಂದು, ಅಷ್ಟೆ, ನೀವು ಇಲ್ಲಿಯೇ ಉಳಿಯಬೇಕು. ಹೌದು. ಕೃಷ್ಣ ತುಂಬಾ ಕಟ್ಟುನಿಟ್ಟಾದವನು.

ಪರಮಹಂಸ: ಆದರೆ ಯೇಸು ಹೇಳಿದನು: "ನಿನ್ನ ಸಹೋದರನನ್ನು ನಿನ್ನಂತೆಯೇ ಪ್ರೀತಿಸು." ಆದ್ದರಿಂದ, ನಾವು ನಮ್ಮ ಸಹೋದರನನ್ನು ಪ್ರೀತಿಸಿದರೆ...

ಪ್ರಭುಪಾದ: ನಾವೂ ಪ್ರೀತಿಸುತ್ತಿದ್ದೇವೆ. ನಾವು ಕೃಷ್ಣ ಪ್ರಜ್ಞೆಯನ್ನು ನೀಡುತ್ತಿದ್ದೇವೆ. ಅದುವೇ ಪ್ರೀತಿ, ನಿಜವಾದ ಪ್ರೀತಿ. ನಾವು ಅವನಿಗೆ ಶಾಶ್ವತ ಜೀವನವನ್ನು, ಶಾಶ್ವತ ಆನಂದವನ್ನು ನೀಡುತ್ತಿದ್ದೇವೆ. ನಾವು ಅವರನ್ನು ಪ್ರೀತಿಸದಿದ್ದರೆ, ಏಕೆ ಇಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ? ಬೋಧಕನು ಜನರನ್ನು ಪ್ರೀತಿಸಬೇಕು. ಇಲ್ಲದಿದ್ದರೆ ಅವನು ಏಕೆ ಕಷ್ಟ ತೆಗೆದುಕೊಳ್ಳುತ್ತಾನೆ? ಅವನು ಅದನ್ನು ಮನೆಯಲ್ಲಿಯೇ ಮಾಡಬಹುದು. ಅವನು ಯಾಕೆ ಅಷ್ಟೊಂದು ತೊಂದರೆ ತೆಗೆದುಕೊಳ್ಳುತ್ತಿದ್ದಾನೆ? ಪ್ರೀತಿಸದಿದ್ದರೆ ಎಂಭತ್ತರ ಹರೆಯದಲ್ಲಿ ನಾನೇಕೆ ಇಲ್ಲಿಗೆ ಬಂದೆ? ಆದ್ದರಿಂದ, ಬೋಧಕನಿಗಿಂತ ಉತ್ತಮವಾಗಿ ಪ್ರೀತಿಸುವವರು ಯಾರು? ಅವನು ಪ್ರಾಣಿಗಳನ್ನು ಸಹ ಪ್ರೀತಿಸುತ್ತಾನೆ. ಆದುದರಿಂದ ಅವರು “ಮಾಂಸವನ್ನು ತಿನ್ನಬೇಡಿ” ಎಂದು ಉಪದೇಶ ಮಾಡುತ್ತಿದ್ದಾರೆ. ಆದರೆ ಈ ಧೂರ್ತರು ಪ್ರಾಣಿಗಳನ್ನು ಪ್ರೀತಿಸುತ್ತಾರೆಯೇ? ಅವರು ತಿನ್ನುತ್ತಿದ್ದಾರೆ, ಮತ್ತು ಅವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ, ಅಷ್ಟೆ. ಯಾರೂ ಪ್ರೀತಿಸುವುದಿಲ್ಲ. ಇದು ಕೇವಲ ಇಂದ್ರಿಯ ತೃಪ್ತಿ. ಯಾರಾದರೂ ಪ್ರೀತಿಸಿದರೆ, ಅವನು ಕೃಷ್ಣ ಪ್ರಜ್ಞೆಯುಳ್ಳವನು, ಅಷ್ಟೆ. ಎಲ್ಲಾ ದುಷ್ಟರು. ಅವರು ತಮ್ಮ ಇಂದ್ರಿಯ ತೃಪ್ತಿಗಾಗಿ ಹಾತೊರೆಯುತ್ತಾರೆ ಆದರೆ "ನಾನು ಎಲ್ಲರನ್ನೂ ಪ್ರೀತಿಸುತ್ತೇನೆ", ಎಂಬ ಫಲಕವನ್ನು ಹಾಕುತ್ತಾರೆ. ಇದೇ ಅವರ ವ್ಯವಹಾರ. ಮತ್ತು ಮೂರ್ಖರು, "ಓಹ್, ಈ ಮನುಷ್ಯ ತುಂಬಾ ಪರೋಪಕಾರಿ", ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಅವನು ಯಾವ ಮನುಷ್ಯನನ್ನೂ ಪ್ರೀತಿಸುವುದಿಲ್ಲ. ಅವನು ಇಂದ್ರಿಯಗಳನ್ನು ಮಾತ್ರ ಪ್ರೀತಿಸುತ್ತಾನೆ. ಅಷ್ಟೆ. ಇಂದ್ರಿಯಗಳ ಸೇವಕ, ಅಷ್ಟೆ.