KN/Prabhupada 1075 - ಈ ಜೀವನದ ಕಾರ್ಯಗಳಿಂದ ನಾವು ಮುಂದಿನ ಜೀವನವನ್ನು ಸಿದ್ಧಗೊಳಿಸುತ್ತಿದ್ದೇವೆ



660219-20 - Lecture BG Introduction - New York

ಭಗವಂತ ಗೀತೆಯಲ್ಲಿ ಅಂತಕಾಲೇ ಚ ಮಾಮೇವ ಸ್ಮರನ ಮುಕ್ತ್ವಾ ಕಲೆವರಂ ಎನ್ನುತ್ತಾನೆ (ಭ ಗೀತೆ 8.5) ಯಾರು ಈ ದೇಹವನ್ನು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನನ್ನು ಸ್ಮರಿಸಿ ತ್ಯಜಿಸುತ್ತಾರೋ ಅವರು ಸಚ್ಚಿದಾನಂದವಾದ ಆಧ್ಯಾತ್ಮಿಕ ದೇಹವನ್ನು ಪಡೆಯುತ್ತಾರೆ. ಈ ಐಹಿಕ ಜಗತ್ತಿನಲ್ಲಿ ಈ ದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ಪಡೆಯುವ ಪ್ರಕ್ರಿಯೆಯು ವ್ಯವಸ್ಥಿತವಾಗಿದೆ. ಒಬ್ಬ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಯಾವ ರೂಪದ ದೇಹವನ್ನು ಪಡೆಯಬೇಕೆಂಬುದು ತೀರ್ಮಾನವಾದ ನಂತರ ಸಾಯುತ್ತಾನೆ. ಆದರೆ ಈ ತೀರ್ಮಾನವನ್ನು ಮೇಲಿನ ಅಧಿಕಾರಿಗಳು ಮಾಡುತ್ತಾರೆ. ಹೇಗೆ ನಮ್ಮ ಸೇವೆಗೆ ಅನುಗುಣವಾಗಿ ನಾವು ಮೇಲಕ್ಕೇರುತ್ತೇವೆ ಅಥವಾ ಕೆಳಗಿಳಿಯುತ್ತೇವೋ ಹಾಗೆಯೇ ನಮ್ಮ ಈ ಜನ್ಮದ ಕರ್ಮಗಳ ಅನುಗುಣವಾಗಿ ನಮ್ಮ ಮುಂದಿನ ಜನ್ಮ ಸಿದ್ಧಗೊಳ್ಳುತ್ತದೆ. ಈ ಜೀವನದ ಕಾರ್ಯಗಳಿಂದ ನಾವು ಮುಂದಿನ ಜೀವನವನ್ನು ಸಿದ್ಧಗೊಳಿಸುತ್ತಿದ್ದೇವೆ. ಆದುದರಿಂದ ನಾವು ಭಗವಂತನ ರಾಜ್ಯಕ್ಕೆ ಏರಲು ಈ ಜನ್ಮದಲ್ಲಿ ಸಿದ್ಧತೆಯನ್ನು ಮಾಡಿಕೊಂಡರೆ ಆಗ ನಿಶ್ಚಿತವಾಗಿಯೂ ಈ ಐಹಿಕ ದೇಹವನ್ನು ತ್ಯಜಿಸಿದ ನಂತರ ಶ್ರೀ ಕೃಷ್ಣ, ಯಃ ಪ್ರಯಾತಿ, ಯಾರು ಹೋಗುತ್ತಾರೋ, ಸ ಮದ್ ಭಾವಂ ಯಾತಿ (ಭ ಗೀತೆ 8.5) ಮದ್ ಭಾವಂ ಅವರು ಭಗವಂತನ ದೇಹವನ್ನು ಹೋಲುವ ಅಥವಾ ಅಂತಹುದೇ ಆಧ್ಯಾತ್ಮಿಕ ಪ್ರಕೃತಿಯ ದೇಹವನ್ನು ಪಡೆಯುತ್ತಾನೆ ಎಂದು ಹೇಳಿದ್ದಾನೆ. ಹಿಂದೆಯೇ ವಿವರಿಸಿದಂತೆ ಅಧ್ಯಾತ್ಮಿಕವಾದಿಗಳಲ್ಲಿ ಹಲವು ವರ್ಗಗಳುಂಟು. ಬ್ರಹ್ಮವಾದಿ, ಪರಮಾತ್ಮವಾದಿ, ಹಾಗೂ ಭಕ್ತ. ಆಧ್ಯಾತ್ಮಿಕ ಗಗನ (ಬ್ರಹ್ಮಜ್ಯೋತಿ)ದಲ್ಲಿ ಹಿಂದೆಯೇ ಚರ್ಚಿಸಿರುವಂತೆ ಅಸಂಖ್ಯಾತ ಆಧ್ಯಾತ್ಮಿಕ ಗ್ರಹಗಳಿವೆ. ಈ ಗ್ರಹಗಳ ಸಂಖ್ಯೆಯು ಐಹಿಕ ಜಗತ್ತಿನ ಎಲ್ಲಾ ಗ್ರಹಗಳ ಸಂಖ್ಯೆಗಿಂತ ಅಪಾರವಾದದ್ದು. ಈ ಐಹಿಕ ಜಗತ್ತು ಏಕಾಂಶೇನ ಸ್ಥಿತೋ ಜಗತ್ (ಭ ಗೀತೆ 10.42) ಈ ಜಗತ್ತು ಸೃಷ್ಟಿಯ ಕಾಲುಭಾಗ ಮಾತ್ರ. ಇನ್ನು ಸೃಷ್ಟಿಯ ಮುಕ್ಕಾಲು ಭಾಗ ಆಧ್ಯಾತ್ಮಿಕ ಜಗತ್ತು. ಸೃಷ್ಟಿಯ ಕಾಲುಭಾಗದ ಈ ಐಹಿಕ ಜಗತ್ತಿನಲ್ಲಿ ಕೋಟ್ಯಾಂತರ ವಿಶ್ವಗಳಿವೆ. ನಾವು ಇದರ ಅನುಭವ ಪಡೆಯುತ್ತಿದ್ದೇವೆ. ಒಂದು ವಿಶ್ವದಲ್ಲಿ ಕೋಟಿ ಕೋಟಿ ಗ್ರಹಗಳಿವೆ. ಈ ಐಹಿಕ ಜಗತ್ತಿನಲ್ಲಿ ಕೋಟ್ಯಾಂತರ ಸೂರ್ಯರು, ಚಂದ್ರರು, ತಾರೆಗಳು ಇವೆ. ಆದರೆ ಇವೆಲ್ಲವೂ ಸೃಷ್ಟಿಯ ಕಾಲು ಭಾಗ ಮಾತ್ರ. ಇನ್ನೂ ಮುಕ್ಕಾಲು ಭಾಗ ಆಧ್ಯಾತ್ಮಿಕ ಗಗನ. ಈಗ, ಮದ್ ಭಾವಂ, ಪರಬ್ರಹ್ಮನ ಅಸ್ಥಿತ್ವದಲ್ಲಿ ಒಂದಾಗಬಯಸುವವನು ಕೂಡಲೇ ಭಗವಂತನ ಬ್ರಹ್ಮಜ್ಯೋತಿಯಲ್ಲಿ ಲೀನವಾಗುತ್ತಾನೆ. ಮದ್ ಭಾವಂ ಎಂದರೆ ಬ್ರಹ್ಮಜ್ಯೋತಿ ಅಥವಾ ಬ್ರಹ್ಮಜ್ಯೋತಿಯಲ್ಲಿರುವ ಆಧ್ಯಾತ್ಮಿಕ ಗ್ರಹಗಳು. ಭಗವಂತನ ಸಂಗವನ್ನು ಬಯಸುವ ಭಕ್ತನು ಅಸಂಖ್ಯಾತವಾದ ವೈಕುಂಟ ಗ್ರಹಗಳನ್ನು ಸೇರುತ್ತಾನೆ. ಅಸಂಖ್ಯಾತವಾದ ವೈಕುಂಟ ಗ್ರಹಗಳಿವೆ ಹಾಗೂ ಕೃಷ್ಣನು ನಾರಾಯಣನಾಗಿ ತನ್ನ ಸ್ವರೂಪವನ್ನು ಚತುರ್ಭುಜಗಳಿಂದ ವಿಸ್ತರಿಸಿ, ಪ್ರದ್ಯುಮ್ನ, ಅನಿರುದ್ಧ, ಮಾಧವ, ಗೋವಿಂದ, ಮೊದಲಾದ ಹೆಸರುಗಳೊಡನೆ ಅವನಿಗೆ ಸಂಗ ಭಾಗ್ಯವನ್ನು ನೀಡುತ್ತಾನೆ. ಈ ಚತುರ್ಭುಜ ನಾರಾಯಣನಿಗೆ ಅನೇಕ ನಾಮಗಳಿವೆ. ಮದ್ ಭಾವಂ ಆಧ್ಯಾತ್ಮಿಕ ಪ್ರಕೃತಿಯಲ್ಲಿರುವ ಗ್ರಹ ಆದುದರಿಂದ ಬದುಕಿನ ಅಂತ್ಯಕಾಲದಲ್ಲಿ ಅಧ್ಯಾತ್ಮಿಕವಾದಿಗಳು ಬ್ರಹ್ಮಜ್ಯೋತಿಯನ್ನು ಕುರಿತಾಗಲೀ, ಪರಮಾತ್ಮನನ್ನು ಕುರಿತಾಗಲೀ, ಅಥವಾ ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನನ್ನಾಗಲಿ ಧ್ಯಾನಿಸಿದರೆ ಆಧ್ಯಾತ್ಮಿಕ ಗಗನವನ್ನು ಪ್ರವೇಶಿಸುತ್ತಾರೆ. ಆದರೆ ಭಕ್ತನು ಮಾತ್ರ ಅಥವಾ ಭಗವಂತನ ನೇರ ಸಂಪರ್ಕ ಹೊಂದಿದವನು ಮಾತ್ರ ವೈಕುಂಟ ಗ್ರಹಗಳನ್ನು ಅಥವಾ ಗೋಲೋಕ ವೃಂದಾವನ ಗ್ರಹವನ್ನು ಪ್ರವೇಶಿಸುತ್ತಾನೆ. ಕೃಷ್ಣನು, ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯಾತ್ರ ಸಂಶಯಃ ಎನ್ನುತ್ತಾನೆ. ಇದರಲ್ಲಿ ಸಂಶಯವಿಲ್ಲ, ಇದನ್ನು ಧೃಡವಾಗಿ ನಂಬಬೇಕು. ನಾವು ನಮ್ಮ ಜೀವನದಾದ್ಯಂತ ಗೀತೆಯನ್ನು ಓದುತ್ತೇವೆ, ಆದರೆ ನಮ್ಮ ಕಲ್ಪನೆಗೆ ಹೊಂದಿಕೊಳ್ಳದಿರುವುದನ್ನು ಭಗವಂತ ಹೇಳಿದಾಗ ನಾವು ತಿರಸ್ಕರಿಸುತ್ತೇವೆ. ಇದು ಗೀತೆಯನ್ನು ಓದುವ ಕ್ರಮವಲ್ಲ. ಅರ್ಜುನ ಹೇಳಿದಂತೆ ಸರ್ವಂ ಏತಂ ಋತಂ ಮನ್ಯೇ "ನೀನು ಹೇಳಿರುವುದನೆಲ್ಲಾ ನಾನು ಸಂಪೂರ್ಣವಾಗಿ ನಂಬುತ್ತೇನೆ." ಹಾಗೆಯೇ, ಮರಣಕಾಲದಲ್ಲಿ ಯಾರು ತನ್ನನ್ನು ಬ್ರಹ್ಮನೆಂದೋ, ಪರಮಾತ್ಮನೆಂದೋ, ಅಥವಾ ಪರಮ ಪುರುಷನೆಂದು ಚಿಂತಿಸುತ್ತಾರೋ ಅವರು ಖಂಡಿತವಾಗಿಯೂ ಆಧ್ಯಾತ್ಮಿಕ ಗಗನವನ್ನು ಪ್ರವೇಶಿಸುತ್ತಾರೆ ಎಂದು ಭಗವಂತ ಹೇಳಿದಾಗ ಅದರ ವಿಷಯದಲ್ಲಿ ಸಂಶಯವೇ ಇಲ್ಲ, ಅದನ್ನು ನಂಬದಿರುವ ಪ್ರಶ್ನೆಯೇ ಇಲ್ಲ. ಮರಣಕಾಲದಲ್ಲಿ ಪರಮ ಪ್ರಭುವನ್ನು ಕುರಿತು ಚಿಂತಿಸುವ ಮಾತ್ರದಿಂದಲೇ ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವುದು ಸಾಧ್ಯ ಎನ್ನುವ ಸಾಮಾನ್ಯ ತತ್ವವನ್ನು ಗೀತೆಯು ವಿವರಿಸುತ್ತದೆ. ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜಾತ್ಯಂತೆ ಕಲೇವರಂ ತಂ ತಮೇವೈತಿ ಕೌಂತೇಯ ಸದಾ ತದ್ ಭಾವ ಭಾವಿತಾಃ (ಭ ಗೀತೆ 8.6)